ಕಟ್ಟಡ, ಮನೆ ತೆರಿಗೆ ಮನ್ನಾ ಮಾಡುವಂತೆ ಬೇಬಿ ಕುಂದರ್ ಆಗ್ರಹ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್ ಡೌನ್ ನಿಂದಾಗಿ ಸಂಕಷ್ಟಕ್ಕಿಡಾಗಿದ್ದು ಈ ಹಿನ್ನೆಲೆಯಲ್ಲಿ ಆ ನಿವಾಸಿಗಳ ಕಟ್ಟಡ ಮತ್ತು ಮನೆ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್ ಹಾಗೂ ತ್ಯಾಜ್ಯ ಶುಲ್ಕ ಮನ್ನಾ ಮಾಡುವಂತೆ ಆಗ್ರಹಿಸಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ನೇತೃತ್ವದ ನಿಯೋಗ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿಯವರಿಗೆ ಮನವಿ ಮಾಡಿದೆ.


ಈ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಕ್ ಡಾನ್, ನಂತರ ಸುದೀರ್ಘ ದಿನಗಳ ಸೀಲ್ ಡೌನ್ ಮುಂದುವರಿದಿದೆ. ಆದರೆ ಈ ಪ್ರದೇಶದ ಜನರಿಗೆ ಯಾವುದೇ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ಇದರಿಂದಾಗಿ ಇಲ್ಲಿನ ಜನರಿಗೆ ದಿನನಿತ್ಯದ ಬದುಕು ನಿರ್ವಹಣೆಯೇ ಕಷ್ಟವಾಗಿದೆ. ಈ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳ ಕಟ್ಟಡ ಮತ್ತು ಮನೆ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್ಲು ಹಾಗೂ ತ್ಯಾಜ್ಯ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಪುರಸಭೆಯು ಇವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬೇಬಿ ಕುಂದರ್ ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯತು ಸದಸ್ಯ ಬಿ.ಪದ್ಮಶೇಖರ ಜೈನ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರ್, ಗಂಗಾಧರ ಪೂಜಾರಿ ಮೊದಲಾದವರಿದ್ದರು.